ಸಂಜೆ ಹೊತ್ತು ನೆನಪಾದವರು:(


ಮನೇಲಿ ಕೂತು ಕೂತು ಬೇಜಾರಾಗಿ ಸಂಜೆ ಹೊತ್ತು ಜೋಳದ ಕೂಡ್ಲಿಗಿ ಟಾರು ರೋಡುನಗುಂಟ ಹೊರಟೆ. ದೂರದೂರಿಂದ ಬಂದಿದ್ದ ಮೋಡಗಳೆಲ್ಲಾ ಒಂದಕ್ಕೊಂದು ಆಲಿಂಗನ ಮಾಡಿಕೊಂಡು ಸ್ವಾಗತಿಸುತಿದ್ದವು. ಸೂರ್ಯ ಒಬ್ಬನೇ ಅಲ್ಲೆಲ್ಲೋ ಕದ್ದು ಕೂತು ಇಣುಕುತಿದ್ದ. ನಾಲ್ಕೈದು ದಿನಗಳ ಮಳೆಗೆ ನೆಲ ಮೇಲೆಲ್ಲ ಹಸಿರು ಹಾಸಿತ್ತು, ಪಳುವಕ್ಕನ ಗುಂಡಿಯಲ್ಲಿ ತುಂಬಿದ್ದ ನೀರಲ್ಲಿ ಎಮ್ಮೆಗಳು ಆರಾಮಾಗಿ ಸುಖಿಸುತ್ತಿದ್ದವು. ಈರಯ್ಯಜ್ಜ ಅಲ್ಲೇ ಮರದಡಿಯ ಕಲ್ಲಿನ ಮೇಲೆ ಅಂಡಚ್ಚಿ ಗಣೇಶ ಬೀಡಿ ಸೇದಿ ಬುಸ್ಸೆಂದು ಹೊಗೆ ಬಿಡುತ್ತಿದ್ದ ಹಾಗೆ ಚಳಿಯ ಪರಿಗೆ ಕೈ ಹಾಕಿ ದೇಹದ ಭಾಗಗಳನೆಲ್ಲಾ ತುರಿಸಿಕೊಂಡು ಹಾ ಹಾ ಹಾಅ~~~ ಎನ್ನುತ್ತಾ ಸದ್ದೊರಡಿಸುತ್ತಿದ್ದ. ಆತನೆಡೆಗೊಂದು ಲುಕ್ಕು ಕೊಟ್ಟು ಹೊರಟೆ, ಆತ ಮಾತ್ರ ಫಳ್ಳೆಂದು ಹಲ್ಲಿಲ್ಲದ ಬಾಯ ತೆಗೆದು ನಕ್ಕೇಬಿಟ್ಟ.


ಮುಂದೆ
ಹೋಗುತ್ತಲೇ ಸಂಕಮ್ಮಜ್ಜಿ ಕಟ್ಟಿಗೆಗಳ ಹೊರೆ ತಲೆ ಮೇಲೆ ಎತ್ತಿಟ್ಟುಕೊಳ್ಳಲು ಕಷ್ಟಪಡುತಿತ್ತು, ಸ್ವಲ್ಪ ಹೊರೆಯ ಎತ್ತಿ ತಲೆ ಮೇಲಿಟ್ಟೆ, ಕೆಳಗಿದ್ದ ಬುತ್ತಿಗಂಟನ್ನು ಕೈಯಾಗ ಕೊಡು ಅಂತು ಕೊಟ್ಟೆ, ನಸ್ಯಾಪುಡಿಗೆ ಕಪ್ಪಗಿದ್ದ ಹಲ್ಲು ಬಿಟ್ಟು ನಗು ಬೀರಿತು ಮುದುಕಿ. ಊರಿಂದ ತುಸು ದೂರ ಬಂದವನೇ ಸುಮ್ಮನೆ ಸೇಂಗಾ ಹಾಕಿದ್ದ ಹೊಲದ್ದಲ್ಲಿ ಕೂತೆ.


ಸಣ್ಣಗೆ ಬೆಳಕು ಕರಗುತಲಿತ್ತು, ಕಾಡುಗತ್ತಲು ತುಂಬಿದ್ದ ಮನಸ್ಸಲ್ಯಾರೋ ಲಾಟೀನು ಹಿಡಿದು ಮೆಲ್ಲಗೆ ಬರುತ್ತಿದ್ದರು, ಎಲ್ಲವೂ ಅಸ್ಪಷ್ಟ. ಆ ಲಾಟೀನಿನ ಬೆಳಕಿಗೆ ಕತ್ತಲು ಮೆಲ್ಲಗೆ ದೂರ ಸರಿಯುತಲಿತ್ತು. ಆ ಅಸ್ಪಷ್ಟ ಚಿತ್ರದಿಂದೆಯೊಂದಿಷ್ಟು ಎಲ್ಲೊ ನೋಡಿರಬಹುದಾರ ಮುಖಗಳು. ಯಾರಿವರೆಲ್ಲಾ ಎಂದು ಯೋಚಿಸುವಷ್ಟರಲ್ಲಿ ಹತ್ತಿರಾಗಿದ್ದರು, ಹತ್ತಿರಾದವರೇ ’ಹೇ ಹೇಗಿದ್ದಿ, ಆರಾಮ ತಾನೆ’ ಎಂದೆಲ್ಲಾ ಕುಶಲೋಪರಿ ಕೇಳಿದರೂ, ಎಷ್ಟೇ ಪ್ರಯತ್ನಿಸಿದರೂ ನನ್ನ ಬಾಯಿಂದ ಸದ್ದೇ ಹೊರಡುತ್ತಿಲ್ಲ, ಮತ್ತೆ ಮತ್ತದೇ ಪ್ರಯತ್ನ.
ಅವರೆಲ್ಲರೂ ತಂತಮ್ಮ ಮರು ಪರಿಚಯ ಮಾಡಿಕೊಳ್ಳುತಿದ್ದರು. ಕಿವಿಗವೆಲ್ಲಾ ಬಿದ್ದೊಡನೆ ಅನಿಸಿದ್ದು, ಇವರೆಲ್ಲಾ ನನ್ನವರೇ ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಎತ್ತಿ ಆಡಿಸಿದವರು, ಮುದ್ದು ಹುಡುಗನೆಂದು ಗಲ್ಲ ಕಚ್ಚಿದವರು, ಕೆನ್ನೆಗೆ ಮುತ್ತಿಟ್ಟವರು, ಮಾತಾಡಿಸಿದವರು, ಜೊತೆಗೆ ಗೋಲಿಯಾಡುವಾಗ ಜಗಳವಾಡಿದವರು, ಗೊಣ್ಣೆಯೊರೆಸಿದವರು, ನಾನು ಸಿಟ್ಟಿನಲ್ಲಿದ್ದಾಗ ನನ್ನಿಂದ ಕಲ್ಲಲ್ಲಿ ಹೊಡೆಸಿಕೊಂಡು ರಕ್ತ ಬರಿಸಿಕೊಂಡವರು, ಲಗೋರಿ ಆಡುವಾಗ ಕಲ್ಲು ಬಚ್ಚಿಟ್ಟವರು, ಪಾಠ ಹೇಳಿಕೊಟ್ಟ ಮಾಸ್ತರುಗಳು, ಕ್ರಿಕೇಟ್ ಆಡಲು ಬರುವುದಿಲ್ಲವೆಂದು ಹೊರ ದಬ್ಬಿದವರು, ಕನಸುಗಳಿಗೆ ಲಗ್ಗೆ ಹಾಕಿದ ಹುಡುಗಿಯರು ಹೀಗೆ ಸಾವಿರಾರು ಸಾವಿರಾರು ಮುಖಗಳು ಕಣ್ಣ ಪರದೆಯ ಮೇಲೆ ಬಂದು ಹೋದರು. ಕೆಲವರು ಬಂದು ಮತ್ತೆ ಮುತ್ತಿಟ್ಟರೆ ಇನ್ನೂ ಕೆಲವರು ತುಟಿಗೆ ತುಟಿ ಸೇರಿಸಿ ಚುಂಬಿಸಿದರು, ಮತ್ತಷ್ಟು ಮುಖ ಸಿಂಡರಿಸಿಕೊಂಡು ಮಾತಾಡದೇ ಹೀಗೆ ಬಂದು ಹಾಗೆ ಹೋದರು, ಇನ್ನಷ್ಟು ನಸುನಕ್ಕು ನನ್ನ ತುಟಿಯ ಮೇಲೊಂದಿಷ್ಟು ನಗುವ ಹಚ್ಚಿದರು ಮತ್ತಷ್ಟು ಮತ್ತಷ್ಟು. ಇವರೆಲ್ಲಾ ನನಗೆ ಪರಿಚಯವಿರಬಹುದವರಾದರೆ, ಇನ್ನಷ್ಟು..........



ನಾನು
ಸ್ಕೂಲಿಗೆ ಹೊಗುವಾಗ ಕಂಡ ಚಪ್ಪಲಿ ಹೊಲೆಯುವ ದುರುಗಪ್ಪ ಹರಿದ ಅಂಗಿಗೊಂದಿಷ್ಟು ತ್ಯಾಪೆ ಹಚ್ಚಿ ಹಾಕಿಕೊಂಡು ಜನ ಕಾಲಿಂದ ಕೊಟ್ಟ ಚಪ್ಪಲಿಯನ್ನು ಬಹು ಶ್ರಧ್ಧೆಯಿಂದ ಹೊಲಿದು ಕೊಡಿತಿದ್ದ ಆ ಕೃತಿ ನನ್ನ ಸ್ಪೃತಿಯ ಪಟಲದಲ್ಲಿನ್ನೂ ಹಾಗೆ ಅಚ್ಚಳಿಯದೇ ಉಳಿದಿದೆ, ಈಗ ಆ ಜಾಗದಲ್ಲಿ ಜಲ್ಲಿ ಕಲ್ಲುಗಳ ರಾಶಿ ಇದೆಯೇ ಹೊರತು ನನ್ನ ಚಿತ್ತವ ಸಡಿಲಿಸಿದ್ದ ದುರುಗಪ್ಪನೆಂಬ ಕೃತಿಯಿಲ್ಲ!!!!!!. ದೂರದಲ್ಲಿ ಇನ್ನೂ ಒಂದು ವಯಸ್ಸಾದ ಆಕೃತಿ ಸೀರೆಯುಟ್ಟು ತಲೆಯ ಮೇಲೆ ಸೆರಗು ಹೊದ್ದು ’ಲೇಟ್ ಆಯ್ತು ಬೇಗ ಬಾಪ್ಪ’ ಎಂದು ಕೂಗುತಿತ್ತು. ಅವಳ ನೆನಪು ಬರದೇ ಇರಲಿಲ್ಲ, ನಾನು ಶಿಶುವಿಹಾರಕ್ಕೆ ಕರೆದುಕೊಂಡು ಹೊಗುತಿದ್ದ, ಹೋಗುವಾಗ ಕೈ ಹಿಡಿದುಕೊಂಡು ಬಹು ಜೋಪಾನದಿಂದ ರಸ್ತೆ ದಾಟಿಸುತಿದ್ದ ಅದೇ ಶಾಂತಮ್ಮಜ್ಜಿ, ಶಿಶುವಿಹಾರದಲ್ಲಿ ಅಮ್ಮನ ನೆನಪು ಬಂದು ಅಳುವಾಗ ಎತ್ತಿಕೊಂಡು ಪೆಪ್ಪರ್ಮೆಂಟು ಕೊಟ್ಟು ಸಮಾಧಾನಿಸುತಿತ್ತು, ಅಲ್ಲಿ ಗದರಿಸಿ ABCD ಹೇಳಿಕೊಡುತ್ತಿದ್ದ ಟೀಚರ್ ಗಳ್ಯಾರು ನೆನಪಿಲ್ಲ, ನೆನಪಿರುವುದೊಂದೆ ನನ್ನ ಪ್ರೀತಿಯ ಶಾಂತಮ್ಮಜ್ಜಿ. ಮೊನ್ನೆ ಸತ್ತ ಸುದ್ದಿ ಗೊತ್ತಾಗಿ ಕಣ್ಣು ಒದ್ದೆಯಾದವು.


ಏನೋ ಪಾವ್ಂ ಪಾವ್ಂ ಎನ್ನುವ ಸದ್ದು ಎಚ್ಚರವಾಗುವಂತೆ ಮಾಡಿತು, ಕಣ್ತೆರೆದು ಟೈಮು ನೋಡಿದಾಗ ರಾತ್ರಿ ಒಂಭತ್ತರ ಸನಿಹವಾಗಿತ್ತು. ಅದೇ ದಾರಿಗುಂಟ ಸದ್ದಿಲ್ಲದೇ ಹೊರಟೆ ಅದೂ ಇಲ್ಲದ ಮನಸ್ಸಿಂದ. ಇವರೆಲ್ಲಾ ಮತ್ತೆ ಮತ್ತೆ ನೆನಪಾದುದೇಕೆ, ನನ್ನ ಮನಸ್ಸೇಕೆ ಭಾರವೆನಿಸುತ್ತಿದೆ??? ಇವುಗಳಿಗೆ ಉತ್ತರವೇನು ಬೇಡವೆನಿಸಿತು. ಅವರನ್ನೆಲ್ಲಾ ಮತ್ತೆ ನೋಡಬೇಕೆನಿಸಿತು....

Comments

  1. Nice written Pravara...memories always hidden in heart tightly....

    ReplyDelete
  2. ಜೀವನದ ದಾರಿಗುಂಟ ಸಾಗಿದ ಪಯಣವನ್ನು ಮತ್ತೆ ತೆರೆದಿಟ್ಟು ಮನಸಿಗೆ ಮುದವಿಟ್ಟಿತು.

    ReplyDelete
  3. nenapugale heegallave..
    tereteredashtu muda taruttave..

    ನನ್ನ 'ಮನಸಿನಮನೆ'ಗೂ ಬನ್ನಿ: http://manasinamane.blogspot.com/ruttave..

    ನನ್ನ 'ಮನಸಿನಮನೆ'ಗೂ ಬನ್ನಿ: http://manasinamane.blogspot.com/

    ReplyDelete
  4. ತುಂಬಾ ಚೆನ್ನಾಗಿದೆ ಕಣ್ರೀ...ಬರೀತಾ ಹೋಗಿ

    ಕೆ ಎಸ್ ನವೀನ್

    ReplyDelete
  5. Pravara sir,

    tumba chennagi barediddiraa, haleya nenapugala kanaja nijakkoo chenna

    ReplyDelete
  6. ಗಿರೀಶ್ ಅವರೆ, ಕೃಷ್ಣ ಮೊಹನ್ ಸರ್, ವಿಚಲಿತ ಅವರೆ, ಕೆ.ಎಸ್.ನವೀನ್ ಅವರೆ, ನಾಗರಾಜ್ ಅವರೆ.... ನಿಮ್ಮ ಪ್ರತಿಕ್ರಿಯೆ ಇಂದಾಗಿ ಇನ್ನಷ್ಟು ಬರೆಯಲು ಹುಮ್ಮಸ್ಸು ಬರುತ್ತಿದೆ.... ಧನ್ಯವಾದಗಳು.....

    ReplyDelete
  7. ನೆನಪುಗಳ ಸು೦ದರ ಸರಮಾಲೆ ಮುದನೀಡಿತು. ಅಭಿನ೦ದನೆಗಳು.

    ReplyDelete
  8. ಅ೦ತರ೦ಗದಾಳದ ಭಾವ ಬಿ೦ದುಗಳ ತು೦ತುರು ಹನಿಯಲ್ಲವೆ ನೆನಪ ಸುರುಳಿ

    ReplyDelete
  9. ಬಾಲ್ಯದ ಹಾದಿಯಲ್ಲಿ ಬಂದ ಮುಖಗಳ ಪ್ರವರ ಚೆನ್ನಾಗಿ ಹಿಡಿದಿಟ್ಟಿದ್ದಿರಾ...

    ReplyDelete

Post a Comment

ಅನ್ಸಿದ್ ಬರೀರಿ

Popular posts from this blog

ನೀನಿಲ್ಲದೆ ನೀರವ ಮೌನ

ಫಸ್ಟ್ ಬೆಂಚ್ ಸುಂದ್ರಿ